Monday, September 1, 2008

ಮಚ್ಚು, ಕೊಚ್ಚು - ಕೋಡು, ಬಗ್ಗು...

ನಾವೆನಪ್ಪ ತಪ್ಪ್ ಮಾಡಿರೊದು? ಇವ್ರಿಗೆ ಎಲ್ಲಾರ್ ಲವ್ ಸ್ಟೋರಿನೂ ಅರ್ಥ ಅಗುತ್ತೆ, ಆದ್ರೆ ಸಾಫ್ಟ್ ವೇರ್ ಇಂಜಿನಿಯರ್ಸ್ ಲವ್ ಸ್ಟೋರಿ ಮಾತ್ರ ಕಾಣ್ಸೋದೆ ಇಲ್ವಾ? ಸಾಫ್ಟವೇರ್ ಕೆಲ್ಸ ಮಾಡೊವ್ರಿಗೆ ಹೃದಯನೇ ಇಲ್ಲ ಅನ್ಕೊಂಡಿದಾರಾ?

’ರೇಡಿಯೊ ಮಿರ್ಚಿ’ಲಿ ಹಾಂಗೆ ಒಂದು ಹಾಡು ಬರ್ತಾ ಇತ್ತು. ’ಆ ದಿನಗಳು, ಆ ದಿನಗಳು...’ ಅಂತಾ. ಆ ಹಾಡು ಕೇಳ್ತಾನೆ, ನಂಗೆ ಈ ಯೊಚನೆ ಬರೋಕೆ ಶುರುವಾಯ್ತು. ಇತ್ತೀಚಿಗೆ ಈ ಸಿನಿಮಾ ಮಾಡೊವ್ರಿಗೆ ಅಂಡರ್ ವರ್ಲ್ದ ಬಿಟ್ಟರೆ ಬೇರೆ ಕಥೇನೇ ಸಿಗಲ್ವ ಅಂತ. ಇವ್ರಿಗೆ, ’ಆ ದಿನಗಳ’ಲ್ಲಿ, ಪ್ರೀತಿ ಕಾಣ್ಸುತ್ತೆ, ಆದರೆ ’ಈ ದಿನಗಳಲ್ಲಿ’ ಯಾಕೆ ಕಾಣ್ಸೊಲ್ವೊ?

ಹಾಗೆ ಒಂದು ಸಾರಿ ಯೊಚನೆ ಮಾಡಿ ನೋಡಿ. ನಾನು ಹೇಳ್ತಾ ಇರೊದು ಸರಿನಾ ತಪ್ಪಾ ಅಂತ ನಿಮ್ಗೇ ಗೊತ್ತಾಗುತ್ತೆ. ಹೀರೊ ಸಾಫ್ಟ್ ವೇರ್ ಇಂಜಿನಿಯರ್ ಆಗಿರೊ ಯಾವ್ದಾದ್ರು ಒಂದು ಪಿಚ್ಚರ್ ತೋರ್ಸಿ ಸಾಕು. ’ಮುಂಗಾರು ಮಳೆ’ ಅಂತ ಬಂತು, ಅದ್ರಲ್ಲಿ ತೋಯಿಸ್ಕೊಂಡಿದ್ದು ಒಬ್ಬ ಕೆಲ್ಸ ಇಲ್ದಿರೊ ಪಟ್ಟೆ ಹುಡುಗ ಮತ್ತೆ ಇನ್ನೊಬ್ಬ ಮಿಲಿಟರಿ ಮ್ಯಾನ್. ಮತ್ತೆ ಈ ’ಜೋಗಿ’ - ’ರೋಗಿ’, ’ಮೆಂಟಲ್ಲು - ಡೆಂಟಲ್ಲು ಮಂಜ’, ’ದುನಿಯಾ-ಕರಿಯಾ’, ಎಲ್ಲದ್ರಲ್ಲು ಬರೀ ಅಂಡರ್ ವರ್ಲ್ದೇ. ಸ್ವಲ್ಪ ಹಿಂದಕ್ಕೋದ್ರೆ, ಹೀರೊ ಒಬ್ಬ ಡಾಕ್ಟರೊ, ಇಲ್ಲ ಪತ್ರಕರ್ತನೋ, ಅಥವಾ ಲಾಯರೋ, ಇನಿಸ್ಪೆಕ್ಟರೋ ಆಗಿರ್ತಾನೆ. ಇಂಜಿನಿಯರ್ಸೂ ಈ ಜಗತ್ತಲ್ಲಿ ಇದಾರೆ, ಅವ್ರ ಮಧ್ಯದಲ್ಲೂ ಪ್ರೀತಿ, ಪ್ರಣಯ, ಸರಸ, ವಿರಸ ಇರ್ತವೆ ಅನ್ನೋದು ಇವ್ರಿಗೆ ಕಾಣ್ಸೋದೇ ಇಲ್ವಾ?

ಹು, ಆ ’ಅಮೇರಿಕ-ಅಮೇರಿಕ’ ದಲ್ಲಿ ಮಾತ್ರ ಆ ’ಶಶಾಂಕ’ ಸಾಫ್ಟವೇರ್ ಇಂಜಿನಿಯರ್ ಆಗಿರ್ತಾನಪ್ಪ. ಆದ್ರೆ ಎನ್ಬಂತು, ಕೊನೆಗೆ 'ಭೂಮಿ'ನಾ ಹಾರಿಸ್ಕೊಂಡು ಬರೋದು ’ಸೂರ್ಯ’ ತಾನೆ? ಅದು ಅಲ್ಲದೇ, ಪಾಪ ಆ ’ಶಶಾಂಕನ್ನ’ ಸಾಯಿಸೇ ಬಿಡ್ತಾರಲ್ರೀ...

ಇದೆಲ್ಲಾ ಯಾಕೆ ಹೇಳ್ದೆ ಅಂದ್ರೆ, ಈಗ್ನೋಡಿ, ನಮ್ಮಲ್ಲಿ ಎಷ್ಟೊಂದು ಸಾಫ್ಟವೇರ್ ಕಂಪನಿಗಳು ಇದಾವಲ್ವಾ? ಬೆಂಗಳೂರಿನಲ್ಲಿ ಆಗೂ ಒಂದು ಐವತ್ತು ಪರ್ಸೆಂಟು ಲವ್ ಸ್ಟೋರುಗಳು ಸಾಫ್ಟವೇರ್ ಇಂಡಸ್ಟ್ರೀಯಲ್ಲೇ ಶುರು ಆಗೋದು ಅಂತ ನಂಗನ್ಸುತ್ತೆ. ಒಕೆ, ಐವತ್ತು ಪರ್ಸೆಂಟು ಅನ್ನೊದು ಎಗ್ಜಾಗಿರೇಶನ್ ಅನ್ಸುತ್ತಾ? ಹಾಗದ್ರೆ ಒಂದು ಮುವತ್ತು ಪರ್ಸೆಂಟು ಅಂತಾ ಇಟ್ಕೊಳ್ಳಿ. ಅದೂ ಹೆಚ್ಚೇ ಅಲ್ವಾ? ನಿಮ್ಗೊತ್ತಾ, ಆ ’ವಿಪ್ರೋ’ ಕಂಪನಿನಾ, ’ಲವರ್ಸ್ ಪ್ಯಾರಡೈಸ್’ ಅಂತಾರೆ. ಅಲ್ಲಿ ಅರ್ಧಕ್ಕರ್ದ ಲವ್ ಬರ್ಡ್ಸೇ. ಇನ್ನು ಇನ್ಫೋಸಿಸ್ ತೊಗೋಳಿ. ಅಲ್ಲೂ ಅದೇ ಕಥೆನೇ. ಹಾಗೆ, ಈ ಐಬಿಎಮ್ಮು, ಟಿಸಿಎಸ್ಸು, ಅದು, ಇದು, ಅಂತಾ ಸಾವಿರ ಕಂಪನಿಗಳಲ್ಲಿ ಏನಿಲ್ಲ ಅಂದ್ರು ಎರ್ಡು ಸಾವಿರ ಜೋಡಿಗಳಾದ್ರು ಸಿಗೋಲ್ವಾ?. ಇನ್ನು ಈ ಕಾಲ್ ಸೆಂಟರ್ಸ್ ನ ತೊಗೊಂಡ್ರೆ, ಅಲ್ಲಿ ಮಸಾಲೆ ಐಟಮ್ಸ್ ಗಳಿಗೇನು ಬರಾನಾ?. ತಿಂಗಳಿಗೆ ಒಂದಾದ್ರು ಅಬಾರ್ಶನ್ ಕೇಸು ಗ್ಯಾರಂಟಿ. ಇನ್ನು ವಿಲನ್ಸ್ ಬೇಕಾ, ಮ್ಯಾನೆಜರ್ಸ್ ಗಳೆಲ್ಲ ಅವರೇ. ಪೋಷಕ ನಟರು ಬೇಕು ಅಂದ್ರೆ, ಲವ್ ವಿರೋಧಿಸೋ ಅಪ್ಪ ಅಮ್ಮ ಇರ್ತಾರಲ್ಲ. ಹಂಗೆ, ಫಾರಿನ್ ಲೊಕೆಶನ್ ಬೇಕು ಅಂದ್ರೆ, ಆನ್ ಸೈಟ್ ಅಂತಾ ಹೋಗಿ, ಅಲ್ಲೇ ಲವ್ವಲ್ಲಿ ಬಿದ್ದು, ಅಲ್ಲೇ ಸೆಟ್ಟಲ್ ಆಗಿರೋರಿಗೂ ಕಮ್ಮಿ ಇಲ್ಲ. ಮತ್ತೆ ಇಷ್ಟು ಸಾಕಾಗ್ದಾ ಒಂದು ಒಳ್ಳೆ ಸಿನಿಮಾ ಮಾಡೋಕೆ?


ಅದ್ಕೆ, ನಾನು ಹೇಳೋದು ಕೇಳಿ. ಜನ್ರಿಗೆ ಈ ಮಚ್ಚು, ಕೊಚ್ಚು, ಹುಚ್ಚು, ಕಿಚ್ಚು, ಎಲ್ಲಾ ನೋಡಿ ತಲೆ ಕೆಟ್ಟೋಗಿದೆ. ಅದ್ರಲ್ಲೂ ಆ ಹೀರೋ ಮುಖಗಳೋ... ಅದ್ಕೇ ನೋಡಿ ವಾರಕ್ಕೆ ಎರಡರಿಂದ ಮೂರು ಪಿಚ್ಚರ್ ಬಂದ್ರೂ ಅದ್ರಲ್ಲಿ ಒಂದಾದ್ರೂ ಒಂದತ್ತ್ ದಿನ ಓಡ್ತಾವಾ? ಯಾಕಂದ್ರೆ ಜನ ಚೇಂಜ್ ಕೇಳ್ತಾರೆ! ಅದೇ ಸಾಫ್ಟವೇರ್ ಇಂಡಸ್ಟ್ರೀಗೆ ಬಂದ್ರೆ, ಇಲ್ಲಿ, ದುಡ್ಡಿದೆ, ಲವ್ ಇದೆ, ರೋಮ್ಯಾನ್ಸ್ ಇದೆ, ನಾನ್ ಸೆನ್ಸೂ ಇದೆ. ಆ ಕರೀ ಗಾಜಿನ ಜಗಮಗಿಸುವ ಬಿಲ್ಡಿಂಗ್ ಒಳಗೆ ನೋವೂ ಇದೆ. ಪ್ರಜರ್ರು, ಫ್ರಸ್ಟ್ರೇಶನ್ನು ಜೊತೆಗೆ ಅವಮಾನ, ಅನುಮಾನ, ಎಲ್ಲಾ ಇದೆ. ಇದೆಲ್ಲಾ ಸೇರ್ಸಿ ಒಂದು ಮಸಾಲೆ ಸಿನಿಮಾ ಮಾಡಿದ್ರೆ ಹೇಗಿರುತ್ತೇ ನೀವೇ ಹೇಳಿ?


ಹು, ಇಷ್ಟೆಲ್ಲಾ ಹೇಳಿದ್ ಮೇಲೂ ಜನ ಅದೇ ಮಚ್ಚು, ಕೊಚ್ಚು ಅಂತಾ ಸಿನಿಮಾ ಮಾಡ್ತಿದ್ರೆ, ಇವ್ರ ಮೇಲೇನು ಬಗ್ ರೈಸ್ ಮಾಡೊಕಾಗುತ್ತ...?

Saturday, August 30, 2008

ella OK, Conversion yake?

This is the third incident I heard of a friend falling in love with person of a different cast and then in all the cases the Hindu person in the relationship getting converted to either Islam or Christianity.

The first friend of mine was a Christian. He fell in love with a Hindu girl. His parents put a condition that the girl should convert to Christianity. This girl was bold enough to oppose their parents for sake of her love, but this guy said 'I cant leave my parents!'. End of the story is yet to be known.

The second friend was a Muslim. She fell in love with a Hindu guy. I dont know who forced for the conversion, but I got to know that the guy has agreed to get converted to Islam.

And the third incident is of a Hindu woman who loved a Muslim guy and got converted to Islam.

I am not against anybody or any religion. I feel love is beyond community or religion. But then why conversion in the name of love? Do you call this love? Isnt it hypocrisy? Its an insult to the word 'love'. If you observe it, the other person who is getting converted has the guts to oppose his/her parents and society for sake of the loved one. But the other person is asking this person to get converted, because he/she doesnt have that guts. If I were faced with such a situation, I would say "get lost".

And that too why always a Hindu should get converted? Well, if you really love somebody then marry him/her, but keep the religion out of this.

Friday, August 8, 2008

ಇದೇನ ಸಭ್ಯತೆ, ಇದೇನ ಸಂಸ್ಕೃತಿ?..

ಇದೇನ ಸಭ್ಯತೆ, ಇದೇನ ಸಂಸ್ಕೃತಿ,
ಇದೇನ ನಮ್ಮ ಸತ್ಯತೆ, ಇದೇನ ನಮ್ಮ ಜಾಗ್ರತೆ,
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ,

ಇದೇನ ಸಭ್ಯತೆ, ಇದೇನ ಸಂಸ್ಕೃತಿ... ||

ಎನಿತು ದೇಶ ಭಕ್ತರು, ಹರಿಸಿ ತಮ್ಮ ನೆತ್ತರು,
ದಾಸ್ಯದಿಂದ ನಮ್ಮನು ಬಿಡಿಸಿ ಅಮರರಾದರು,
ಅಮರ ರಾಮ ರಾಜ್ಯದ ಕನಸು ಕಂಡೆವಂದು,
ಬರಿಯ ಬೇಧ ಭಾವವ ಕಾಣುತಿಹೆವು ಇಂದು...

ಇದೇನ ಸಭ್ಯತೆ, ಇದೇನ ಸಂಸ್ಕೃತಿ... ||

ದೇಶವನ್ನು ಕಾಯುತಿಹರು ಗಡಿಗಳಲ್ಲಿ ಯೋಧರು,
ನಮಗೆ ಅನ್ನ ನೀಡಲು ದುಡಿಯುತಿಹರು ರೈತರು,
ಅವರ ತ್ಯಾಗ ದುಡಿಮೆಯ ಪರಿವೆ ನಮಗೆ ಇಲ್ಲ,
ಗಾಂಧಿ, ನೆಹರು ಶಾಸ್ತ್ರಿಯನ್ನು ನಾವು ಮರೆತೆವಲ್ಲ...

ಇದೇನ ಸಭ್ಯತೆ, ಇದೇನ ಸಂಸ್ಕೃತಿ... ||

ದೇಶದಾ ಸಮಸ್ಯೆಗಳು ಇರಲು ಕೋಟಿ ಕೋಟಿ,
ಅದನು ಮರೆತು ಸಾಗಿದೆ ಫ್ಯಾಶೆನ್ನಿನ ಪೈಪೋಟಿ,
ಮಾನ ಮುಚ್ಚಿಕೊಳ್ಳಲು ಕೆಲವರಿಗೆ ಬಟ್ಟೆಯಿಲ್ಲ,
ಪೂರ್ತಿ ಮೈ ಮುಚ್ಚಲು ಕೆಲವರಿಗೆ ಮನಸಿಲ್ಲ...

ಇದೇನ ಸಭ್ಯತೆ, ಇದೇನ ಸಂಸ್ಕೃತಿ,
ಇದೇನ ನಮ್ಮ ಸತ್ಯತೆ, ಇದೇನ ನಮ್ಮ ಜಾಗ್ರತೆ,
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ ...

-----------------------------------------------
ಚಿತ್ರ : ಮಣ್ಣಿನ ಮಗ. ಸಂಗೀತ: ಜಿ. ಕೆ. ವೆಂಕಟೇಶ್

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Saturday, July 26, 2008

ಜಿ. ಬಿ. ಜೋಷಿಯವರ ಒಂದು ಹಾಸ್ಯಮಯ ಸನ್ನಿವೇಶ

ಗಿರೀಶ್ ಕಾರ್ನಾಡ್ ರವರ "ಮದುವೆಯ ಆಲ್ಬಮ್" ನಾಟಕವನ್ನು ಓದುವಾಗ, ಅದರ ಮುನ್ನುಡಿಯಲ್ಲಿ ದಿ ಬಿ. ಜಿ. ಜೋಷಿ ಯವರ ಜೊತೆಗಿನ ಒಂದು ಪ್ರಸಂಗವನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಜೋಷಿಯವರ ಉತ್ತರ ಕರ್ನಾಟಕ ಶೈಲಿಯ ಹಾಸ್ಯ ಭರಿತ ಮಾತುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಆತುರವಾಗುತ್ತಿದೆ.




ಈ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಹಿನ್ನಲೆ ಬೇಕು. ಅದು ಹೀಗಿದೆ:ಬ್ರಾಹ್ಮಣರಲ್ಲಿ "ಗರುಡ ಪುರಾಣ" ಎನ್ನುವ ಒಂದು ಪುರಾಣವಿದೆ. ಅದರಲ್ಲಿ, ಮನುಷ್ಯ ಸತ್ತ ನಂತರ ಅವನು ಸ್ವರ್ಗ ಅಥವಾ ನರಕಕ್ಕೆ ಹೋಗುವದು, ಅಲ್ಲಿ ಚಿತ್ರಗುಪ್ತ ಎನ್ನುವನು ಇವನ ಕರ್ಮಾಕರ್ಮಗಳ ಬಗ್ಗೆ ವಿಚಾರಿಸಿ ಅವನನ್ನು ಸ್ವರ್ಗ ಅಥವಾ ನರಕಕ್ಕೆ ಕಳುಹಿಸುತ್ತಾನೆ. ಅದಕ್ಕೂ ಮುನ್ನ ಸತ್ತವನನ್ನು ಸ್ಮಶಾನಕ್ಕೆ ಒಯ್ಯುವಾಗ ಮನೆಯವರೆಲ್ಲ ಅಳುವುದು, ಮತ್ತೆ ’ಚಟ್ಟ’ ದ ಮೇಲೆ ಕರೆದು ಕೊಂಡು ಹೋಗುವುದು, ಇದನ್ನೆಲ್ಲ ಹಿನ್ನಲೆಯಾಗಿಟ್ಟುಕೊಂಡು ಕೆಳಗಿನ ಮಾತುಗಳನ್ನು ಓದಿ.



ಇಲ್ಲಿ ಜೋಷಿಯವರು ವಿಮಾನದಲ್ಲಿ ಬಾಂಬೆಯಿಂದ ಬೆಳಗಾವಿಗೆ ಬರುವ ಪ್ರಯಾಣವನ್ನು ಈ ರೀತಿ ಸತ್ತ ಮೇಲೆ ಆಗುವ ಘಟನೆಗಳಿಗೆ ಹೋಲಿಕೆ ಮಾಡಿ ಹಾಸ್ಯ ಭರಿತವಾಗಿ ಹೇಳುತ್ತಾರೆ. ಉಳಿದದ್ದನ್ನು ಅವರ ಮಾತುಗಲ್ಲಲ್ಲೇ ಕೇಳಿ. (ಕೆಳಗಿನ ಮಾತುಗಳನ್ನು ಗಿರೀಶ್ ಕಾರ್ನಾಡ್ ರವರು ಹೇಳುತ್ತಾರೆ):

ಅವರು ನನ್ನ 'ಒಂದಾನೊಂದು ಕಾಲದಲ್ಲಿ' ಚಿತ್ರಕ್ಕಾಗಿ ಸಂಭಾಷಣೆ ಬರೆಯಲು ಒಪ್ಪಿಕೊಂಡಾಗ ಮುಂಬೈನಲ್ಲಿದ್ದರು. ಅವರಿಗೂ ಹೊಸ ಅನುಭವ ಆಗಲಿ ಎಂದು ನಾನು 'ವಿಮಾನ ಪ್ರಯಾಣದಿಂದಲೇ ಬೆಳಗಾವಿಗೆ ಬನ್ನಿರಿ' ಎಂದು ತಿಳಿಸಿದೆ. ಆ ಪ್ರವಾಸವನ್ನು ಅವರು ಬಣ್ಣಿಸಿದ್ದು ಹೀಗೆ:



"ಗರುಡ ಪುರಾಣದೊಳಗೆ ಓದಿದ್ದೆಲ್ಲ ಅನುಭವಕ್ಕೆ ಬಂತು ನೋಡಪ್ಪ. ಮನಿಯಿಂದ ಹೊಂಟಾಗ ಹೆಣ್ಣು ಮಕ್ಕಳೆಲ್ಲಾ ಕಣ್ಣಿರು ಹಾಕೋದೇನು? ಮನೀ ಬಾಗಿಲತನಕ ಬಂದು ಕಣ್ಣು ಒರೆಸಿ ನೋಡತಿರತಾ ನಮ್ಮ ಗಾಡಿ ಹೊರದೊದೆನು? ಆ ಮ್ಯಾಲೆ ಜೊತೆಗೆ ಬರೆ ಗಂಡಸರು. ಅತ್ತಲಾಗ ಇಬ್ಬರು, ಇತ್ತಲಾಗ ಇಬ್ಬರು. ಅಗದಿ ಹೊತ್ತುಕೊಂಡು ಹೊಂಟ ಹಾಂಗ. ಏರ್ಪೋರ್ಟ್ ತಲುಪಿದರೆ ಅಲ್ಲಿವರೆಗೆ ಸಂಗತೀಲೆ ಬಂದವರು ಅಲ್ಲಿಂದ ಮುಂದೆ ಬರೂಹಂಗಿಲ್ಲ. ಮುಂದೆ ಹೋಗಲಾರದ, ಹೊಳ್ಳಿ ಹೋಗಲಾರದ ನಿಂತಿರತಾರ. ಮುಖದ ಮ್ಯಾಲೆ ಸ್ಮಶಾನ ಕಳೆ. ನಾ ಮುಂದೆ ಹೋದರೆ ಅಲ್ಲಿ ಒಬ್ಬಾವ ತಡದು ನಿಂದರಿಸಿ, ’ಏನು ತಂದೀ? ಕೈಯಾಗ ಏನು ಹಿಡದೀ? ಪರಭಾರೆ ಎಷ್ಟು ನಗ ಹೋದವು?’ ಅಂತ ಚಿತ್ರಗುಪ್ತನ ಹಾಂಗ ಯಾದಿ ಹಿಡಕೊಂಡು ನಿಂತಿರತಾನ. ಆವ ದಾರಿ ಬಿಟ್ಟರೆ ಮುಂದೆ ಬಳಸಿ ಬಳಸಿ ಹೋಗಿ ಒಂದು ಹಾಲ್. ಯಾವ ಗ್ವಾಡಿಗೂ ಬಾಗಿಲ ಕಿಡಕಿ ಇದ್ದಹಾಂಗೆ ಕಾಣಿಸಲಿಲ್ಲ. ಎಲ್ಲರ ಮಾರಿ ನಿರ್ವಿಕಾರ - ಪ್ರೇತಗಳ ಹಾಂಗೆ ಕೂತಿರತಾ. ಒಂದು ಆಕಾಶವಾಣಿ ಏನೋ ಘೋಷಣೆ ಮಾಡತದ. ಒಮ್ಮೆಲೆ ಒಂದು ಗುಂಪು ಏಳತದೆ, ಹೋಗತದೆ. ನರಕಕ್ಕೋ, ಸ್ವರ್ಗಕ್ಕೋ. ಕಳಿಸಿದಲ್ಲಿ ಹೋಗತಕ್ಕದ್ದು. ಕಡೀಕೊಮ್ಮೆ ನಮ್ಮ ಪಾಳಿ. ಬಾಗಿಲು ದಾಟಿ ಹೊರಗೆ ಹೋಗಿ ಮೆಟ್ಟಿಲು, ಮೆಟ್ಟಿಲು ಏರಿ ಕಣಿವೆಯ ಹಾಂಗೆ ಇರೋ ವಿಮಾನದಾಗ ಹೋಗಿ ಕೂಡಬೇಕು. ಇದೆಲ್ಲಿ ಒಯ್ಯತದ? ಗೊತ್ತಿಲ್ಲ. ಆದರೆ ಭೂಮಿ ಅಂತೂ ದೂರ ದೂರ ಹೋಧಾಂಗ, ನಾ ಸತ್ತ ಹೋಗೀನಿ ಅನ್ನೋದು ಖಾತ್ರಿ ಆತು!"



ಈ ವಿವರಣೆಯ ಅಂತ್ಯ ಕೂಡ ಥೇಟ್ ಜಿ. ಬಿ. ’ಇಷ್ಟೆಲ್ಲಾ ಆಗಿ ವಿಮಾನ ಹೀಂಗ ಕೆಳಗೆ ನೆಲಕ್ಕೆ ಇಳಿದು ಬಂತು ನೋಡು, ಥೂ! ಕುಂಡಿ ಹರದು ಹೋತು’

Tuesday, July 15, 2008

ಭೈರಪ್ಪನವರ "ಆವರಣ" ದ ಬಗ್ಗೆ ನನ್ನ ಅನಿಸಿಕೆಗಳು

"ಆವರಣ" ವನ್ನು ಓದಿದ್ದು ಸುಮಾರು ಒಂದು ವರ್ಷದ ಹಿಂದೆ. ಓದಿದ ಕೆಲವೇ ದಿವಸಗಳ ನಂತರ ಈ ಲೇಖನವನ್ನು ಬರೆದಿದ್ದೆ. ಆದರೆ ಇದುವರೆಗೂ ಇದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಅವಕಾಶ ಒದಗಿರಲಿಲ್ಲ. ಈಗ ಇ ಬ್ಲಾಗ್ ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. ತಮ್ಮ ಅನಿಸಿಕೆಗಳಿಗೆ ಸ್ವಾಗತ.

=====

"ಸತ್ಯಶೋಧನೆಯಲ್ಲಿ ಓದುಗನೂ ಲೇಖಕನಷ್ಟೇ ಪಾಲುದಾರ. ಪಾತ್ರಗಳನ್ನಾಗಲಿ ಸನ್ನಿವೇಶಗಳನ್ನಾಗಲಿ ಸತ್ಯದ, ಕಲಾಸತ್ಯದ, ವಸ್ತುನಿಷ್ಠೆಯಿಂದ ಗ್ರಹಿಸಿ ಅವುಗಳ ಭಾವವನ್ನು ಆಸ್ವಾದಿಸಬೇಕೇ ಹೊರತು ವೈಯಕ್ತಿಕ ರಾಗ ದ್ವೇಷಗಳಿಂದ ಉದ್ರೇಕಗೊಳ್ಳಬಾರದು. ಹಿಂದಿನವರು ಮಾಡಿದ ತಪ್ಪುಗಳಿಗೆ ಇಂದಿನವರು ಜವಾಬ್ದಾರರಲ್ಲ; ಹಿಂದಿನವರೊಡನೆ ತಮ್ಮನ್ನು ತಾವು ಸಮೀಕರಿಸಿಕೊಂಡು ತಾವು ಅವರ ವಾರಸುದಾರರಾಗಬೇಕೆಂಬ ರಾಗಕ್ಕೆ ಸಿಕ್ಕಿಕೊಂಡರೆ ಹಿಂದಿನವರ ತಪ್ಪಿನ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ನಮ್ಮ ಪೂರ್ವಿಕರ ಯಾವ ಯಾವ ಕೃತ್ಯಗಳನ್ನು ನಾವು ತಿರಸ್ಕರಿಸಬೇಕು, ಯಾವ ಯಾವ ಸಾಧನೆಗಳಿಂದ ಸ್ಫೂರ್ತಿಪಡೆಯಬೇಕು ಎಂಬ ವಿವೇಚನೆ ಇಲ್ಲದಿದ್ದರೆ ನಾವು ಪ್ರೌಢರಾಗುವುದಿಲ್ಲ. ಇತಿಹಾಸದಿಂದ ಪಡೆಯುವಂತೆ ಬಿಡಿಸಿಕೊಳ್ಳುವುದೂ ಪಕ್ವತೆಯ ಗುರುತು. ಇದು ಪ್ರತಿಯೊಂದು ಧರ್ಮ, ಜಾತಿ, ವರ್ಗದವರಿಗೂ ಅನ್ವಯಿಸುವ ಮಾತು."



ಭೈರಪ್ಪನವರ ಆವರಣ ಕಾದಂಬರಿಯು ಮುನ್ನುಡಿಯಲ್ಲಿನ ಈ ಮೇಲಿನ ಮಾತುಗಳೊಂದಿಗೆ ಆರಂಭವಾಗುತ್ತದೆ. ಆವರಣದ ಕಥಾವಸ್ತು, ಪಾತ್ರ ಮತ್ತು ಸನ್ನಿವೇಶಗಳನ್ನು ಅವರ ಈ ಮೇಲಿನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಆಸ್ವಾದಿಸಬೇಕಾಗುತ್ತದೆ.



ಭೈರಪ್ಪನವರು ಮುನ್ನಿಡಿಯಲ್ಲಿ ಹೇಳಿರುವಂತೆ, ಇಲ್ಲಿ ನಾವು ಮೂಲತಃ ಎರಡು ಪ್ರಶ್ನೆಗಳನ್ನು ಇಟ್ಟುಕೊಂಡು ಕಾದಂಬರಿಯನ್ನು ಅವಲೋಕಿಸಬೇಕಾಗುತ್ತದೆ. ಮೊದಲನೆಯದಾಗಿ, ಸಾಹಿತ್ಯಿಕ ಕಲೆಯನ್ನು ಇತಿಹಾಸದ ಸತ್ಯದ ಕುರಿತು ರಚಿಸುವಾಗ, ಸತ್ಯದ ಬಗೆಗೆ ಸಾಹಿತಿಗೆ ಇರಬೇಕಾದ ಜವಾಬ್ದಾರಿಯೇನು? ಸಾಹಿತ್ಯಿಕ ಕೃತಿಯಲ್ಲಿ ಐತಿಹಾಸಿಕ ವ್ಯಕ್ತಿಗಳನ್ನು ವಿಜ್ರಂಭಿಸಿಯೋ ಅಥವಾ ಹೀಯಾಳಿಸಿಯೋ ಸೃಷ್ಟಿಸಿದಾಗ ಓದುಗನು ಕಾಲ್ಪನಿಕ ಕಥೆಯನ್ನೇ ಸತ್ಯವೆಂದು ನಂಬಿ ದಾರಿತಪ್ಪುವ ಸಾಧ್ಯತೆಗಳು ಅಸಂಖ್ಯ. ಈ ನಿಟ್ಟಿನಲ್ಲಿ ಆವರಣ ಕಾದಂಬರಿಯು ಸೌಂದರ್ಯಕ್ಕಿಂತ ಸತ್ಯಕ್ಕೆ ಹೆಚ್ಚು ಎರವಾಗಿ ನಿಲ್ಲುತ್ತದೆ. ಕಾದಂಬರಿಯನ್ನು ಓದಿದ ಯಾರಿಗಾದರೂ ಕೆಲವು ಪ್ರಶ್ನೆಗಳು ಕಾಡೇ ಕಾಡುತ್ತವೆ. ಕಾದಂಬರಿಯಲ್ಲಿ ಬರುವ ಅನೇಕ ಪ್ರಮುಖ ಪಾತ್ರಗಳಿಗೇಕೆ ಸರಿಯಾದ ಅಂತ್ಯ ತೋರಿಸಿಲ್ಲ? ಕಾದಂಬರಿಯನ್ನು ಅವಸರದಲ್ಲಿ ಮುಗಿಸಿದ್ದಾರಲ್ಲವೆ? ಎಂದು. ಈ ಪ್ರಶ್ನೆಗಳನ್ನು ಸತ್ಯ ಮತ್ತು ಸೌಂದರ್ಯಗಳ ಸಂಘರ್ಷದ ಹಿನ್ನೆಲೆಯಲ್ಲಿ ನೋಡಿದಾಗ ನಾವು ಸರಿಯಾದ ಉತ್ತರಗಳನ್ನು ಕಾಣಬಹುದು. ಉದಾಹರಣೆಗೆ, ಭೈರಪ್ಪನವರೇ ಹೇಳುವಂತೆ, ಕಾದಂಬರಿಯಲ್ಲಿ ಬರುವ ಖ್ವಾಜಾಜಹಾನನ ಪಾತ್ರದಿಂದ ಔರಂಗಜೇಬನನ್ನು ಕೊಲ್ಲಿಸಿ, ಆ ಪಾತ್ರಕ್ಕೊಂದು ರೋಚಕ ಹಾಗೂ ಸಾಹಸಿಕ ಅಂತ್ಯವನ್ನು ಕಾಣಿಸಬಹುದಾಗಿತ್ತು. ಅಥವಾ ಕಥೆಯನ್ನು ಇನ್ನೂ ಮುಂದುವರಿಸಿ, ಅವನು ಛತ್ರಪಾಲ ರಾಜನೊಡನೆ ಹೋಗಿ ಸೇರುವ ನಂತರ ಔರಂಗಜೇಬ ಹಾಗೂ ಅವನನ್ನು ಅದುವರೆಗೆ ಅನೇಕ ರೀತಿಯಲ್ಲಿ ಹಿಂಸಿಸಿದ ಮನ್‌ಸಬ್‌ದಾರರ ಮೇಲೆ ಅವನು ಸೇಡು ತೀರಿಸಿಕೊಳ್ಳುವಂತೆ ಚಿತ್ರಿಸಿ ಒಂದು ರೋಚಕ ಅಂತ್ಯವನ್ನು ಕೊಡಬಹುದಿತ್ತು. ಆದರೆ, ಹಾಗೆ ಮಾಡಿದ್ದಾಗ ಕಾದಂಬರಿಯು ಐತಿಹಾಸಿಕ ಸತ್ಯಕ್ಕೆ ಅಪಚಾರವೆಸಗಿದಂತಾಗುತ್ತಿತ್ತು. ಏಕೆಂದರೆ, ಇತಿಹಾಸವೇ ಹೇಳುವಂತೆ, ಔರಂಗಜೇಬನು ಕಾಶಿಯ ಮಂದಿರಗಳನ್ನು ನಾಶಮಾಡಿದ ನಂತರವೂ ಮೂವತ್ತೆಂಟು ವರ್ಷ ಬದುಕಿದ್ದನಂತೆ.



ಇನ್ನು ಕಾದಂಬರಿಯನ್ನು ಅವಸರವಾಗಿ ಮುಗಿಸಿದ್ದಾರೆ ಎನ್ನುವುದು. ಕೊನೆಗೆ ಎಲ್ರೂ ಸುಖವಾಗಿದ್ರು. . . ಎನ್ನುವಂತಹ ಅಡುಗೂಲಜ್ಜಿಯ ಕಥೆಗಳಿಗೆ ಹೊಂದಿಕೊಂಡಂಥವರಿಗೆ, ಭೈರಪ್ಪನವರ ಈ ಶೈಲಿ ಕೊಂಚ ಇರುಸು ಮುರುಸು ಉಂಟು ಮಾಡುವುದು ಸಹಜ. ಇಲ್ಲಿ ಕಾದಂಬರಿಯ ಮೂಲ ಪ್ರಶ್ನೆ ಸುಳ್ಳಿನ ತಳಹದಿಯ ಮೇಲೆ ಗಟ್ಟಿ ಸಮಾಜವನ್ನು ಕಟ್ಟುವುದು ಸಾಧ್ಯವೇ ಎನ್ನುವುದೇ ಹೊರತು ಕಾದಂಬರಿಯ ಪಾತ್ರಗಳು ಅಳಿದವೇ, ಉಳಿದವೇ ಎನ್ನುವುದಲ್ಲ. ಇಲ್ಲಿ, ಕಾದಂಬರಿಯನ್ನು ಓದಿದ ನಂತರವೂ ಓದುಗನ ಮನಸ್ಸನ್ನು ಈ ಪ್ರಶ್ನೆಯಿಂದ ಆವರಿಸಿಕೊಳ್ಳುವುದೇ ಕಾದಂಬರಿಕಾರರ ಉದ್ದೇಶ. ಈ ನಿಟ್ಟಿನಲ್ಲಿ ಕಾದಂಬರಿಯ ಪಾತ್ರಗಳಿಗೆ ಯಾವುದೇ ರೀತಿಯ ಅಂತ್ಯವನ್ನು ಕೊಡದೇ ಇರುವುದು ಸಾಹಿತ್ಯದ ಒಂದು ತಂತ್ರವೇ ಹೊರತು ಅವಸರದ ಮುಕ್ತಾಯವಲ್ಲ.



ಇರಲಿ...



ಇನ್ನು, ಕಾದಂಬರಿಯ ಅವಲೋಕನ ಮಾಡುವಾಗ, ನಾವು ಕೇಳಿಕೊಳ್ಳಬೇಕಾದ ಎರಡನೆಯ ಪ್ರಶ್ನೆಯೆಂದರೆ, ಸುಳ್ಳಿನ ತಳಹದಿಯ ಮೇಲೆ ಗಟ್ಟಿ ಸಮಾಜವನ್ನು ಕಟ್ಟುವುದು ಸಾಧ್ಯವೆ? ಎಂಬುದು. ಮೇಲೆ ತಿಳಿಸಿದ ಹಾಗೆ, ಇದು ಕಾದಂಬರಿಯ ಮೂಲ ಪ್ರಶ್ನೆಯೂ ಹೌದು.



ಮೊದಲು ಕಾದಂಬರಿಯಲ್ಲಿ ಬರುವ ಪಾತ್ರಗಳತ್ತ ಸ್ವಲ್ಪ ನೋಡೋಣ. ಕಾದಂಬರಿಯ ಪ್ರಮುಖ ಪಾತ್ರ ಲಕ್ಷ್ಮಿ ಉರ್ಫ್ ರಜಿಯಾಳನ್ನು ಮೂಲತಃ ಹಿಂದೂ ಧರ್ಮದ ಸಾಂಕೇತಿಕ ಚಿನ್ಹೆ (symbol) ಎಂದೇ ಭಾವಿಸಬಹುದು. ಅಮೀರನ ಪಾತ್ರವನ್ನು ಇಡೀ ಮುಸ್ಲಿಂ ಧರ್ಮದ ಚಿನ್ಹೆ (icon) ಎಂದುಕೊಳ್ಳಬಹುದು. ಇಲ್ಲಿ ಲಕ್ಷ್ಮಿ ಪ್ರೀತಿಯ ಮೋಹಕ್ಕೊ, ಕಾಮಕ್ಕೊ ಸಿಲುಕಿ ತನ್ನ ಧರ್ಮವನ್ನು ತ್ಯಜಿಸಿ ಮುಸ್ಲಿಂ ಧರ್ಮವನ್ನು ಸೇರುತ್ತಾಳೆ. ಒಂದು ರೀತಿಯಲ್ಲಿ ತನ್ನ ತನವನ್ನು ಕಳೆದುಕೊಳ್ಳುತ್ತಾಳೆ ಎಂದು ಅರ್ಥೈಸಬಹುದು. ಆದರೆ ನಂತರ ತನ್ನ ತಂದೆಯ ಸಂಶೋಧನೆಗಳಿಂದ ಪ್ರಭಾವಿತಳಾಗಿ ತನ್ನತನವನ್ನು ಮರಳಿ ಪಡೆಯುತ್ತಾಳೆ.



ಹಾಗೆ ನೋಡಿದರೆ, ಇಂದಿನ ಹಿಂದೂ ಧರ್ಮದ ಸ್ಥಿತಿಯೂ ಲಕ್ಷ್ಮಿಯ ಸ್ಥಿತಿಗಿಂತ ಭಿನ್ನವಾಗಿಲ್ಲವಲ್ಲವೆ? ಪರಧರ್ಮ ಸಹಿಷ್ಣುತೆ ಎಂಬ ತಾತ್ವಿಕ ನಿಲುವಿನ ಎಳೆದಾಟ, ಪರಧರ್ಮಗಳ ದಬ್ಬಾಳಿಕೆ, ನಮ್ಮವರ ಅಂಜುಗುಳಿತನ, ರಾಜಕೀಯ ದುರಾಸೆ, ಸ್ವಹಿತಾಸಕ್ತಿಗಳಿಂದ ತುಕ್ಕು ಹಿಡಿದ ಹಿಂದೂ ಧರ್ಮ ನಮ್ಮ ಪುರಾತನ ಸಂಸ್ಕೃತಿಯಿಂದ ತನ್ನತನವನ್ನು ಮರಳಿ ಪಡೆಯಬೇಕಾಗಿದೆ.



ಅದೇ ರೀತಿ ಅಮೀರ ಪ್ರತಿನಿಧಿಸುವ ಮುಸ್ಲಿಂ ಧರ್ಮ, ಆಧುನಿಕತೆಯ ಪ್ರಭಾವದಿಂದ ಹಿಂದಿನ ಅನೇಕ ಅನಾಚಾರ, ಅವೈಜ್ನಾನಿಕ ಆಚಾರಗಳನ್ನು ತೊರೆದಿದ್ದರೂ ಕೂಡಾ, ಅವುಗಳ ಪ್ರಭಾವದಿಂದ ಸಂಪೂರ್ಣ ಮುಕ್ತಿಹೊಂದದೆ, ಐತಿಹಾಸಿಕ ಸತ್ಯಗಳನ್ನು ಸ್ವೀಕರಿಸಿ ಅದರಿಂದ ಪಾಠ ಕಲಿಯದೆ, ಸ್ವತಃ ತಾನೂ ನರಳಿ ಇತರರನ್ನೂ ನರಳಿಸುತ್ತಿದೆ. ಕಾದಂಬರಿಯ ಕೊನೆಯಲ್ಲಿ ಆಗುವಂತೆ, ಅಮೀರ ತನ್ನ ತಪ್ಪುಗಳನ್ನು, ಐತಿಹಾಸಿಕ ಸತ್ಯವನ್ನು ಒಪ್ಪಿಕೊಂಡು ರಜಿಯಾಳನ್ನು ಸೌಹಾರ್ದತೆಯಿಂದ, ಪ್ರೀತಿಯಿಂದ ಕೂಡಿಕೊಳ್ಳುವುದೇ ಇಂದಿನ ಸಮಾಜದ ಅತ್ಯವಶ್ಯಕತೆ.ಒಬ್ಬ ಆರೋಗ್ಯವಂತ ಪುರುಷನ ವೃಷಣಗಳನ್ನು ಒಡೆದು ನಪುಂಸಕನನ್ನಾಗಿ ಮಾಡಿ, ಹೆಂಗಸರಂತೆ ಅವನನ್ನು ಕಾಮಕ್ರೀಡೆಗಳಿಗೆ ಉಪಯೋಗಿಸಿ, ಸ್ತ್ರೀಯರ ಸೇವೆಗಾಗಿ ಗುಲಾಮನನ್ನಾಗಿ ಬಳಸುವ ಹೀನ ಸಂಸ್ಕೃತಿ ನಮ್ಮ ದೇಶದಲ್ಲಿ ಇತ್ತೆಂದರೆ ಅದರಂತಹ ನಾಚಿಕೆಗೇಡಿನ ವಿಷಯ ಬೆರೊಂದಿಲ್ಲ. ಆದರೆ ಇಂತಹ ಸಂಸ್ಕೃತಿ ನಿರ್ಮಾಣವಾಗಿದ್ದು ಮತ್ತು ಚಾಲನೆಯಲ್ಲಿದ್ದುದು ಕೆಲವು ಮತಾಂಧ ವ್ಯಕ್ತಿಗಳಿಂದ ಹಾಗೂ ಅಂಥಹವರ ಬೋಧನೆಗಳಿಂದಲೇ ಎನ್ನುವುದು ಸಾರ್ವತ್ರಿಕ ಐತಿಹಾಸಿಕ ಸತ್ಯ. ಈ ಸತ್ಯಗಳ ತಳಹದಿಯ ಮೇಲೆಯೇ ಭಾವೀ ಭಾರತದ ನಿರ್ಮಾಣವಾಗಬೇಕೆ ಹೊರತು, ಅತಿಮಾನುಷವಾಗಿ ವಿಜ್ರಂಭಿಸಲಾಗಿರುವ ಟಿಪ್ಪೂ ಸುಲ್ತಾನ್‌ರಂತಹರ ಸ್ಪೂರ್ಥಿಯಿಂದಲ್ಲ. ನಮಗೆ ಬೇಕಾಗಿರಿವುದು ಅಕ್ಬರನ ಪರಧರ್ಮ ಸಹಿಷ್ಣುತೆಯೇ ಹೊರತು ಔರಂಗಜೇಬನ ಮತಾಂಧತೆಯಲ್ಲ.



ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರಾಂತದಲ್ಲಿ ನಡೆದ ಅನೇಕ ಲೂಟಿ, ಸುಲಿಗೆ, ದರೋಡೆ, ಮತಾಂತರಗಳಿಗೆ ನಮ್ಮ ಅಜ್ಜಿ ತಾತಂದಿರೇ ಪ್ರತ್ಯಕ್ಷ ಸಾಕ್ಷಿಯಾಗಿರುವಾಗ, ಹಾಳು ಹಂಪೆ, ಪಾಳು ಕಾಶಿ, ಮಥುರೆಯ ಭಗ್ನಾವಷೇಶವಳೆ ಸತ್ಯವನ್ನು ಸಾರಿ ಸಾರಿ ಹೇಳುತ್ತಿರುವಾಗ, ಹಿಂದೆ ಏನು ನಡೆದೇ ಇಲ್ಲ ಎಂದು ಪ್ರತಿಪಾದಿಸುವುದು, ರಾಜಕೀಯ ಹಿತಾಸಕ್ತಿಗೋಸ್ಕರ ಸುಳ್ಳು ಇತಿಹಾಸವನ್ನು ಸೃಷ್ಟಿಸುವುದು ನಾಚಿಕೆಗೀಡಲ್ಲವೆ?



ಮುಸ್ಲಿಂ ಸಮಾಜದಲ್ಲಿ ಇಂದಿಗೂ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಸಾಕ್ಷರತೆಯ ಪ್ರಮಾಣ ಶೇ ೩೦ ನ್ನೂ ದಾಟಿಲ್ಲ. ಶೇ ೭೦ ಕ್ಕೂ ಹೆಚ್ಚು ಜನರು ಬಡತನ ರೇಖೆಗಿಂತಲೂ ಕೆಳಗಿದ್ದಾರೆ. ಇಂತಹ ಅನೇಕ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿರುವಾಗ, ತಮ್ಮ ಇಮೇಜನು ವೃದ್ದಿಸುವದಕ್ಕಾಗಿ ಕ್ಷಣಕ್ಷಣಕ್ಕೆ ಮಾತು ಬದಲಿಸುತ್ತಾ, ಜನಮನ್ನಣೆಗೋಸ್ಕರ ಇತಿಹಾಸವನ್ನೇ ತಿರುಚುವ ಪ್ರೊಫೆಸರ್ ಶಾಸ್ತ್ರಿಯಂಥವರಿಗೆ, ಮುಸ್ಲಿಂ ಜನರ ಅನಕ್ಷರತೆಯನ್ನೇ ಓಟು ಬ್ಯಾಂಕಿನ ಬಂಡವಾಳವಾಗಿ ಬಳಸುವ ರಾಜಕೀಯ ಹಿತಾಸಕ್ತಿಗಳಿಗೆ ಅಂತಃಪ್ರಜ್ನೆಯೆನ್ನುವುದೇ ಇಲ್ಲವೆ?



ಅಷ್ಟಕ್ಕೂ, ಮುಸ್ಲಿಂ ಸಮಾಜದ ಕೆಳಸ್ಥರದಲ್ಲಿರುವ ಬಹುಪಾಲು ಜನರಿಗೆ ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಇತಿಹಾಸದ ಹಾಳು ಚಿಂತೆಯಾಗಲಿ, ಬೇರೆ ಮತದವರೊಂದಿಗೆ ಇಂತಹ ವಿಷಯದ ಬಗ್ಗೆ ಬಡಿದಾಡುವ ಶಕ್ತಿಯಾಗಲಿ ಇಲ್ಲವೇ ಇಲ್ಲ. ಇಂದಿಗೂ ಹಳ್ಳಿಗಳಲ್ಲಿ ಇದನ್ನು ಸ್ಪಷ್ಟವಾಗಿ ನೋಡಬಹುದು. ಅವರಲ್ಲಿರುವುದು ನೆರೆಹೊರೆಯಲ್ಲಿ ಒಂದಾಗಿ ಬದುಕುವ ಉತ್ಸಾಹ ಮತ್ತು ಹೊಂದಾಣಿಕೆಯೆ ಹೊರತು ದ್ವೇಶವಲ್ಲ.



ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಡೆಯುವ ಹುಸೇನ್‌ಸಾಬ್ ದರ್ಗಾದ ಉರುಸಿನಲ್ಲಿ ಸಕ್ಕರೆ ಊದಿಸಿಕೊಂಡು ಬರಲು ನಮ್ಮ ತಾಯಿ ನಮಗೆ ಹೇಳುತ್ತಿದಳು. ಅದೇ ರೀತಿ, ಸಂಕ್ರಾಂತಿಯ ದಿನ ನನ್ನ ಮುಸ್ಲಿಂ ಗೆಳೆಯರೂ ಕೂಡಾ ನಮ್ಮೊಂದಿಗೆ ಎಳ್ಳು ಬೆಲ್ಲ ಬೀರಿದ್ದು ನನಗಿನ್ನೂ ನೆನಪಿನಲ್ಲಿದೆ.


ಒಂದು ಸಮಾಜ ಅಥವಾ ಧರ್ಮ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ, ಆಧುನಿಕತೆಯೊಂದಿಗೆ ಬೆರೆತುಕೊಳ್ಳುವುದು ಅತ್ಯವಶ್ಯಕ. ಅಂತಹ ಒಂದು ಪ್ರಯತ್ನ ಸಮಾಜದ ಒಳಗಡೆ ಇರುವ ವ್ಯಕ್ತಿಗಳಿಂದ ಆದಗಲೇ ಅದಕ್ಕೆ ಹೆಚ್ಚು ಫಲಿತಾಂಶ ಸಿಗಲು ಸಾಧ್ಯ. ಉದಾಹರಣೆಗೆ, ಗಾಂಧೀಜಿಯನ್ನೊಳಗೊಂಡು ಅನೇಕ ವ್ಯಕ್ತಿಗಳು ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಶ್ರಮಿಸಿದರೂ ಕೂಡಾ ಅತೀ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದ್ದು ಅಂಬೇಡ್ಕರ್‌ರಿಗೆ ಮಾತ್ರ. ಇದಕ್ಕೆ ಕಾರಣ ಅವರು ಆ ಸಮಾಜದ ಒಳಗಿನಿಂದಲೇ ಅದರ ಉದ್ಧಾರಕ್ಕಾಗಿ ಶ್ರಮಿಸಿದ್ದು.



ಸಮಾಜ ಮತ್ತು ತನ್ಮೂಲಕ ಇಡೀ ದೇಶದ ಅಭಿವೃದ್ಧಿಯಾಗಬೇಕೆಂದರೆ, ನಾವು ಪ್ರಮುಖವಾಗಿ ಗಮನ ಕೊಡಬೇಕಾಗಿದ್ದು, ಮತ್ತು ಹೋರಾಡಬೇಕಾಗಿದ್ದು ಸಾಕ್ಷರತೆ, ಆರೋಗ್ಯ, ಆಹಾರಗಳಂತಹ ಮೂಲಭೂತ ಸೌಕರ್ಯಗಳಿಗೋಸ್ಕರವೇ ಹೊರತು ಇತಿಹಾಸದಲ್ಲಿ ಆಗಿಹೋದ ಅನಾಚಾರಗಳಿಗೆ ನಮ್ಮನ್ನು ನಾವು ಹೊಣೆಗಾರರನ್ನಾಗಿಸಿಕೊಂಡರೆ ಅದು ಅಪಕ್ವತೆಯ ಕುರುಹಾಗುತ್ತದೆ. ಅದೇ ರೀತಿ ಇತಿಹಾಸದಲ್ಲಿ ಹೀಗೆ ಆಗಿಯೇ ಇಲ್ಲವೆನ್ನುವುದೂ ಕೂಡಾ ಹೊಣೆಗೇಡಿತನವಾಗುತ್ತದೆ.



ಆವರಣ ಕಾದಂಬರಿಯೂ ಸಾರುವುದು ಮೇಲಿನ ವಿಚಾರವನ್ನೇ. ಕಾದಂಬರಿಯನ್ನು ಕೇವಲ ಸತ್ಯದ ಮತ್ತು ಅದು ಬಿಂಬಿಸುವ ಅಂತರಾರ್ಥದ ದೃಷ್ಠಿಯಿಂದ ನೋಡಬೇಕೇ ಹೊರತು, ಕೇವಲ ಮೇಲ್ನೋಟಕ್ಕೆ ಕಾಣುವ ಮತೀಯ ವಿಷಯದ ವಾಸನೆಯಿಂದಲೇ ಉದ್ರಿಕ್ತಗೊಳ್ಳಬಾರದು. ಈಗಾಗಲೇ ಈ ಕಾದಂಬರಿಯ ವಿರುದ್ಧ ಸೊಲ್ಲೆತ್ತಿರುವ ಅನೇಕ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಒಂದು ಎಚ್ಚರವಿರಲಿ. ಕಾದಂಬರಿಯ ರಚನೆಯ ಹಿಂದೆ ಅನೇಕ ವ್ಯಕ್ತಿಗಳ, ಅನೇಕ ವರ್ಷಗಳ ಸಂಶೋಧನೆಯ ಸಾಧನೆ ಇದೆ. ಈ ಕಾದಂಬರಿಯು ಇತಿಹಾಸದ ಬಗೆಗಿನ ಒಂದು ಆಕರ ಗ್ರಂಥ(Reference Book) ಆಗಬೇಕೇ ಹೊರತು ಇನ್ನೊಂದು ಮತೀಯ ಕಲಹದ ವಸ್ತುವಾಗದಿರಲಿ...

Friday, March 14, 2008

ಆವು ಈವಿನ...

ನನ್ನ ನೆಚ್ಚಿನ ಭಾವ ಗೀತೆ:

ಆವು ಈವಿನ ನಾವು ನೀವಿಗೆ ಆನು ತಾನಾದ ತನನನಾ....
ನಾನು ನೀನಿನ ನೀನಿ ನಾನಿಗೆ ಬೇರೇನು ಜಾನನಾ...



ಈ ಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ಕಿಸಿ....